Tuesday, January 30, 2007

ಐಶ್ ಮದುವೆಯ multi effects!!!!!

2010ರಲ್ಲಿ ವಿಶ್ವದಾದ್ಯಂತ ದೂರ ಸಂಪರ್ಕ ಸ್ಥಗಿತಗೊಳ್ಳುತ್ತದೆಯಂತೆ. ಸೂರ್ಯನ ಉಜ್ವಲ ಕಿರಣದಿಂದಾಗಿ ಹೀಗಾಗುತ್ತದೆಯೆಂದು ಹೇಳಲಾಗಿದೆ. ಆದರೆ ಈ ಫೆಬ್ರವರಿ 27 ರಂದು ನಮ್ಮ ಸುದ್ದಿ ಮಾಧ್ಯಮಗಳ ಮೇಲೆ ಪ್ರಭಾವ ಬೀರಬಲ್ಲ ಘಟನೆಯ ಬಗ್ಗೆ ಎಲ್ಲೂ ವರದಿಯಾಗಿಲ್ಲ.

ಅಂದು 'ಐಶ್ ಮದುವೆ' ಎಂಬ ಘಟನೆಯ ತೀಕ್ಷಣ ಪ್ರಭಾವದಿಂದಾಗಿ ಇತರೆ ಎಲ್ಲಾ ಸುದ್ದಿಗಳು ಪತ್ರಿಕೆಗಳಲ್ಲಿ, ಟಿ ವಿ ಚಾನೆಲ್ ಗಳಲ್ಲಿ ಮೂಲೆಗುಂಪಾಗಲಿವೆ. ರಾಜಕಾರಣಿಗಳು,ನೇತಾರರು ಅಂದು ಯಾವುದೇ ಹೇಳಿಕೆಗಳಾಗಲಿ, ವಿರೋಧಿಗಳ ವಿರುದ್ದ ಆರೋಪ ಮಾಡುವುದಾಗಲಿ, ಹೊಸ ಯೋಜನೆ,ಯೋಚನೆಗಳನ್ನು ಪ್ರಕಟಿಸುವುದಾಗಲಿ ಮಾಡುವುದಿಲ್ಲವಂತೆ. 'ಐಶ್ ಮದುವೆ'ಯ ಮಂಗಳ ವಾದ್ಯದ ಅಬ್ಬರದಲ್ಲಿ ಇವರ ಕಿರುಚಾಟ ಕೇಳಿಸುವುದಿಲ್ಲವಾದ್ದರಿಂದ ಎಲ್ಲರೂ ಸರ್ವಸಮ್ಮತದಿಂದ ಈ ನಿರ್ಣಯ ಕೈಗೊಂಡಿದ್ದಾರೆ.

ಈ ಮಧ್ಯೆ, 'ಅಖಿಲ ಭಾರತ ವಿರಹಿಗಳ ಪಕ್ಷ' ಅಸ್ತಿತ್ತ್ವಕ್ಕೆ ಬಂದಿದ್ದು ಹಾಲಿ ನಟ ಹಾಗು ಮಾಜಿ 'ಐಶ್ ಪ್ರೇಮಿ' ಸಲ್ಮಾನ್ ಖಾನ್ ಈ ಪಕ್ಷದ ಅಧ್ಯಕ್ಷರಾಗಿ ಹಾಗು ಇನ್ನೊಬ ನಟ ವಿವೇಕ್ ಒಬೆರಾಯ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಈ ಪಕ್ಷದ ಕರ್ನಾಟಕ ರಾಜ್ಯ ಘಟಕಕ್ಕೆ ರವಿ ಬೆಳಗೆರೆ ಸಾರಥ್ಯ ವಹಿಸಿಕೊಂಡಿದ್ದಾರೆ.

ನಿನ್ನೆ ಮುಂಬಯಿ ಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಟಿಯಲ್ಲಿ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಮಾತಾಡುತ್ತ ರಾಷ್ಟ್ರಧ್ಯಕ್ಷರು, ಫೆಬ್ರವರಿ 14(ಪ್ರೇಮಿಗಳ ದಿನ)ನ್ನು ಕರಾಳದಿನವನ್ನಾಗಿ ಆಚರಿಸಲು ಕರೆ ನೀಡಿದ್ದಾರೆ. ಅಂದು ಬೆಂಗಳೂರಿನಲ್ಲಿ ವಿರಹಿಗಳಿಗೆ ಸಾಂತ್ವನದ ಮಾತುಗಳಿರುವ ಸಿ ಡಿಯನ್ನು ರವಿ ಬೆಳಗೆರೆ ಬಿಡುಗಡೆ ಮಾಡಲಿದ್ದಾರೆ ಎಂದೂ ತಿಳಿಸಿದರು.

ಈ ಬಾರಿಯ ಪ್ರೇಮಿಗಳ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲು ಕರೆ ನೀಡಿರುವುದರಿಂದ ಅಂದು ಆಗಲಿದ್ದ ಭರ್ಜರಿ ವಹಿವಾಟಿಗೆ ಕೊಡಲಿ ಪೆಟ್ಟು ಬಿದ್ದಿದೆ. ಪ್ರೇಮಿಗಳ ದಿನವನ್ನು ಬಂಡವಾಳವಾಗಿಸಿಕೊಂಡಿದ್ದ ವಾಣಿಜ್ಯ ಸಂಸ್ಥೆಗಳು ಅಪಾರ ನಷ್ಟ ಅನುಭವಿಸುವ ಸೂಚನೆ ಕಂಡು ಬಂದಿದೆ.

ಹೊಸದಾಗಿ ಪ್ರಾರಂಭ ಆಗಿರುವ 'ಅಖಿಲ ಭಾರತ ವಿರಹಿಗಳ ಪಕ್ಷ' ದೇಶದ ರಾಜಕಾರಣದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿದೆ. ಇದರಿಂದ ರಾಜಕೀಯ ಕ್ಷೇತ್ರದಲ್ಲಿ ಯಾವ ತರಹ ಬದಲಾವಣೆಗಳಾಗಬಹುದೆಂದು ಕಾದು ನೋಡಬೇಕಾಗಿದೆ ಎಂದು ರಾಜಕೀಯ ವಿಮರ್ಶಕರು, ಚಿಂತಕರು,ಚಿಂತಿತರು ಅಭಿಪ್ರಾಯ ಪಟ್ಟಿದ್ದಾರೆ.

Sunday, January 21, 2007

ಸ್ಫೋಟಕ ಸುದ್ಧಿ?!!!!!!!!!!!!!!!!!!!

ಇಷ್ಟು ದಿನ ನಿಗೂಢವಾಗಿ ಮಾಯವಾಗಿದ್ದ ತಲೆಬುರುಡೆ ಸಿಕ್ಕಿದೆ. ಮೈ ಕೊಡವಿಕೊಳವಿಕೊಂಡು ಸದ್ಯದಲ್ಲೆ ಇಲ್ಲಿ ಪ್ರತ್ಯಕ್ಷವಾಗಲಿದೆ.
ತನ್ನ ನಿಗೂಢ ಕಣ್ಮರೆಯ ಹಿಂದೆ ಇರುವ ಕಾಣದ, ಕಾಣಿಸುವ,ಕಂಡು ಮರೆಯಾದ ಕೈಗಳ 'ತನಿಖಾ ವರದಿ' ಗಳನ್ನು ಮುಂದಿನ ಎರಡು ಮೂರು ಸಂಚಿಕೆಗಳಲ್ಲಿ ಪ್ರಕಟಿಸುವುದಾಗಿ ನಿಗೂಢ ಲೋಕದಿಂದ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.