Saturday, July 15, 2006

ಲೋಕಾಯುಕ್ತರಿಂದ ಭ್ರಷ್ಟಾಚರಕ್ಕೆ ಕುಮ್ಮಕ್ಕು?!

ದಯವಿಟ್ಟು ಕ್ಷಮಿಸಿ. ಅಮುಖ್ಯಮಂತ್ರಿ ಕುಮಾರ ಕಂಠೀರವ ಸಂದರ್ಶನಕ್ಕಾಗಿ ಹೋಗಿದ್ದೆ ಆದ್ದರಿಂದ ಇಷ್ಟುದಿನ ಇಲ್ಲಿ ತಲೆಹರಟೆ ಮಾಡಲಾಗಲಿಲ್ಲ. ಎಷ್ಟು ಕಾಡಿದರು ಬೇಡಿದರೂ ಅವರು ಸಂದರ್ಶನ ಕೊಡಲಿಲ್ಲ. ಆದರೆ ಅಲ್ಲಿಗೆ ಹೋದುದರಿಂದ ಒಂದೆರಡು ಮಾಹಿತಿಗಳು ಸಿಕ್ಕಿವೆ. ಅದನ್ನಿಲ್ಲಿ ನಿಮಗಾಗಿ ಪ್ರಕಟಿಸುತ್ತಿದ್ದೇನೆ.

ಮಾಜಿ ಲೋಕಾಯುಕ್ತ ವೆಂಕಟಚಲ ಅವರನ್ನು ಮುಂದುವರಿಸದಿರುವುದಕ್ಕೆ ಅವರ ವಯಸ್ಸು ಪ್ರಮುಖ ಕಾರಣವಾಗಿದೆ. ಈ ಇಳಿವಯಸ್ಸಿನಲ್ಲೂ ವೆಂಕಟಚಲ ಯುವಕರನ್ನು ನಾಚಿಸುವಸ್ಟು 'ಕೆಲಸ' ಮಾಡುವುದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತದೆಯೆಂದು 'ಲೆಕ್ಕಾಚಾರ' ಹಾಕಿ ಮಾನ್ಯ ಅಮುಖ್ಯಮಂತ್ರಿಯವರು ಲೋಕಾಯುಕ್ತರನ್ನು ಮುಂದುವರಿಸದಿರುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಇನ್ನೊಂದು ಕಾರಣವೇನೆಂದರೆ, ಅವರನ್ನು ಆ ಹುದ್ದೆಯಲ್ಲಿ ಮುಂದುವರಿಸಿದರೆ ರಾಜ್ಯದಲ್ಲಿ ಭ್ರಷ್ಟಾಚಾರ ಕಡಿಮೆಯಾಗುವ ಬದಲು ಇನ್ನೂ ಹೆಚ್ಚಾಗುವ ಸಂಭವ ಇತ್ತು!

ಭ್ರಷ್ಟಾಚಾರಿಗಳ ಮದ್ಯೆ ಒಂದು ಅಘೋಷಿತ ಸ್ಪರ್ಧೆ ಇದೆ. ಇಲ್ಲಿ ಪ್ರತಿ ಭ್ರಷ್ಟಾಚಾರಿ ಭ್ರಷ್ಟಾಚಾರದ ವಿಷಯದಲ್ಲಿ ಇನ್ನೊಬ್ಬನನ್ನು ಮೀರಿಸುವ ಹುಚ್ಚನ್ನು ಬೆಳಿಸಿಕೊಂಡಿರುತ್ತಾನೆ. ಒಬ್ಬ ಎಷ್ಟು ತಿಂದಿದ್ದಾನೆ ಎಂದು ಗೊತ್ತಾದರೆ ಸಾಕು, ತಾನು ಅವನಿಂಗಿಂತ ಎರಡು ಪಟ್ಟು ತಿನ್ನಬೇಕೆಂದು ಪಣ ತೊಟ್ಟು 'ಕಾರ್ಯ'ಮಗ್ನನಾಗುತ್ತಾನೆ. ಪರಿಸ್ಥಿತಿ ಹೀಗಿರುವಾಗ ವೆಂಕಟಚಲರವರು ಎಲ್ಲಾ ಭ್ರಷ್ಟರ ಒಟ್ಟು 'ಕಮಾಯಿ'ಯ ಸಾರ್ವಜನಿಕ ಪ್ರದರ್ಶನ ಏರ್ಪಡಿಸಿದರೆ ಉಳಿದ ಭ್ರಷ್ಟಾಚರಿಗಳು ಪ್ರದರ್ಶಿಸಲ್ಪಟ್ಟ ಮೊತ್ತದ ದುಪ್ಪಟ್ಟು 'ದುಡಿಯಲು' ಪೈಪೋಟಿಗಿಳಿದು ಸಹಜವಾಗಿ ಭ್ರಷ್ಟಾಚಾರ ಬೆಳೆಯುತ್ತೆ ಹಾಗಾಗಿ ವೆಂಕಟಚಲರವರು ನಿವೃತ್ತಿ ಜೀವನಕ್ಕೇ ಲಾಯಕ್ಕು ಎಂದು ತೀರ್ಮಾನಿಸಿದ್ದಾರೆ.

ಭ್ರಷ್ಟಾಸುರ ಝಿಂದಾಬಾದ್!!!!!